ನಗರೋತ್ಥಾನ ಯೋಜನೆ ಕಾಮಗಾರಿ ಬಿಲ್‌ಗೆ ಕಮಿಷನ್ ಬಾಣ

Advertisement

ಶಿವಕುಮಾರ್ ಮೆಣಸಿನಕಾಯಿ
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ ೪ನೇ ಹಂತದ ೨ ಮತ್ತು ೩ನೇ ಕಂತಿನ ಹಣವನ್ನು ರಾಜ್ಯ ಸರಕಾರ ಬಿಡುಗಡೆಗೊಳಿಸಿ ತಿಂಗಳು ಕಳೆದರೂ ಈತನಕ ಹಣವನ್ನು ಗುತ್ತಿಗೆದಾರರಿಗೆ ಹಣವನ್ನು ಬಿಡುಗಡೆಗೊಳಿಸಿಲ್ಲ. ಬದಲಾಗಿ ಜಿಲ್ಲಾ ನಗರಾಭಿವೃದ್ಧಿ ಕೋಶಗಳ ಅಧಿಕಾರಿಗಳು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಂದ ಕಮಿಷನ್‌ಗಾಗಿ ಪೀಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪ್ರಸಕ್ತ ವರ್ಷ ಕೇಂದ್ರ ಹಾಗೂ ರಾಜ್ಯ ಸರಕಾರದ ತಲಾ ಶೇ.೫೦ರಷ್ಟು ಸಮಾನ ಅನುದಾನ ಪಾಲುದಾರಿಕೆಯ ನಗರೋತ್ಥಾನ ಯೋಜನೆಯಡಿ ರಾಜ್ಯದಲ್ಲಿ ೩೪೯ ಕೋಟಿ ರೂ.ಗಳ ವೆಚ್ಚದ ಕಾಮಗಾರಿ ಅನುಷ್ಠಾನಗೊಳ್ಳುತ್ತಿದೆ. ಈಗಾಗಲೇ ಒಟ್ಟು ೩೪೯ ಕೋಟಿ ರೂ.ಗಳ ಅನುದಾನದ ಪೈಕಿ ಪೌರಾಡಳಿತ ಇಲಾಖೆ ೨೬೦ ಕೋಟಿ ರೂ. ವೆಚ್ಚ ಮಾಡಿ, ಕಾಮಗಾರಿ ಪೂರ್ಣಗೊಳಿಸಿದೆ. ಈ ಅನುದಾನದಲ್ಲಿ ಮುಂದಿನ ಎರಡು ತಿಂಗಳಿನಲ್ಲಿ ಇನ್ನೂ ೮೮ ಕೋಟಿ ರೂ.ಗಳ ಕಾಮಗಾರಿ ನಡೆಸಬೇಕಿದೆ. ಈ ಮಧ್ಯೆ ಮುಖ್ಯಮಂತ್ರಿಗಳ ನಗರೋತ್ಥಾನ ಬಾಕಿ ಇದೆ. ಈ ಮಧ್ಯೆ ಡಿಸೆಂಬರ್ ೨೭ರಂದು ಪೌರಾಡಳಿತ ಇಲಾಖೆ ಹಿಂದಿನ ಕಾಮಗಾರಿಗಳ ಬಿಲ್ ಮೊತ್ತವಾಗಿ ೨ ಮತ್ತು ೩ನೇ ಕಂತಿನ ಒಟ್ಟು ೨೩೩ ಕೋಟಿ ರೂ.ಗಳ ಹಣವನ್ನು ಬಿಡುಗಡೆ ಮಾಡಿದೆ. ಆದರೆ ಅಧಿಕಾರಿಗಳು ಗುತ್ತಿಗೆದಾರರಿಗೆ ಹಣ ನೀಡದೇ ಪೀಡಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.
ರಾಜ್ಯದ ೨೯ ಜಿಲ್ಲೆಗಳಿಗೆ ಏಕಕಾಲಕ್ಕೆ ೨೩೩ ಕೋಟಿ ರೂ.ಗಳನ್ನು ಸಮನಾಗಿ ಬಿಡುಗಡೆ ಮಾಡಲಾಗಿದೆ. ಆದರೆ ಕನಿಷ್ಠ ೧೦ ಜಿಲ್ಲೆಗಳಲ್ಲಿ ತಿಂಗಳು ಕಳೆದರೂ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಿಲ್ಲ. ಈ ಬಗ್ಗೆ ಕಳೆದ ಒಂದು ತಿಂಗಳಿನಿಂದ ಪೌರಾಡಳಿತ ನಿರ್ದೇಶಕರ ಕಚೇರಿಯಿಂದ ಮಾಹಿತಿ ಪಡೆಯಲು ಸಂಯುಕ್ತ ಕರ್ನಾಟಕ ಪ್ರಯತ್ನಿಸಿದರೂ, ಹಣ ಪಾವತಿ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ವಿಷಯವನ್ನು ಒಳಹೊಕ್ಕು ನೋಡಿದಾಗ ಅನೇಕ ಜಿಲ್ಲೆಗಳಲ್ಲಿ ಲೋಕಸಭಾ ಚುನಾವಣೆಯ ನೆಪ ಹೇಳಿ ಅಧಿಕಾರಿಗಳು ಗುತ್ತಿಗೆದಾರರಿಗೆ ಹಣ ನೀಡಲು ಪೀಡಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪೌರಾಡಳಿತ ಸಚಿವ ರಹೀಮ್ ಖಾನ್ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಲಭ್ಯರಾಗಲಿಲ್ಲ. ಆದರೆ ಪೌರಾಡಳಿತ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಅವರು ಪ್ರತಿಕ್ರಿಯೆ ನೀಡಿ, ತಕ್ಷಣ ಪರಿಶೀಲಿಸುವ ಭರವಸೆ ನೀಡಿದ್ದಾರೆ.
ಡಾಕ್ಟರ್ ಚೀಟಿ ಬೇಕೇ ಬೇಕಂತೆ…!
ಪೌರಾಡಳಿತ ಇಲಾಖೆಯ ಯಾವುದೇ ಕೆಲಸ ಆಗಬೇಕಾದರೆ “ಡಾಕ್ಟರ್” ಚೀಟಿ ಬೇಕೆ ಬೇಕು ಎಂಬ ಗಂಭೀರ ಆರೋಪ ಗುತ್ತಿಗೆದಾರರಿಂದ ಕೇಳಿಬಂದಿದೆ. ಮೂಲತಃ ಬೀದರ್ ಜಿಲ್ಲೆಯ ವ್ಯಕ್ತಿ ಇಲಾಖೆಯ ಎಲ್ಲ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂಬುದು ಇಲಾಖೆಯ ವಲಯದಲ್ಲಿ ಬಹಿರಂಗ ವಿಚಾರ. ಸದ್ಯ ಬಿಡುಗಡೆ ಆಗಿರುವ ನಗರೋತ್ಥಾನ ಯೋಜನೆಯ ೨೩೩ ಕೋಟಿ ರೂ.ಗಳ ಹಣದ ಬಟವಾಡೆಯಲ್ಲೂ ಇದೇ ವ್ಯಕ್ತಿಯ ಹೆಸರು ಕೇಳಿಬರುತ್ತಿದೆ. ಜಿಲ್ಲಾ ನಗರಾಭಿವೃದ್ಧಿ ಕೋಶಗಳ ಅಧಿಕಾರಿಗಳು ಇದೇ ವ್ಯಕ್ತಿಯೊಂದಿಗೆ ಚರ್ಚಿಸಿ, ಯಾವ ಜಿಲ್ಲೆಯಲ್ಲಿ, ಯಾವ ಗುತ್ತಿಗೆದಾರರಿಗೆ ಹಣ ನೀಡಬೇಕು ಎಂಬುದನ್ನು ನಿರ್ಧರಿಸುತ್ತಾರೆ ಎಂದು ಹೇಳಲಾಗುತ್ತಿದೆ.