ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ವಿಚಾರಣಾಧೀನ ಕೈದಿ ಸಾವು

ವಿಚಾರಣಾಧೀನ ಕೈದಿ
Advertisement

ಬೆಳಗಾವಿ: ಪೋಕ್ಸೋ ಪ್ರಕರಣದಡಿ ಬಂಧನಕ್ಕೆ ಒಳಗಾಗಿ ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಯುವಕನೊಬ್ಬ ಜೈಲಿನ ಆವರಣದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕಿತ್ತೂರು ತಾಲೂಕಿನ ಬಚ್ಚನಕೇರಿಯ ನಿವಾಸಿ ಮಂಜುನಾಥ ನಾಯ್ಕರ(೨೦) ಎಂಬುವನೇ ಆತ್ಮಹತ್ಯೆ ಮಾಡಿಕೊಂಡವನು. ಮೂರು ತಿಂಗಳ ಹಿಂದೆ ಪೋಕ್ಸೋ ಪ್ರಕರಣದಲ್ಲಿ ಪೊಲೀಸರಿಗೆ ಅತಿಥಿಯಾಗಿ ಕಾರಾಗೃಹಕ್ಕೆ ಬಂದಿದ್ದ ಮಂಜುನಾಥ, ಶನಿವಾರ ಜೈಲು ಆವರಣದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೇಳೆ ಸಹ ಕೈದಿಗಳು ನೋಡಿ ಜೈಲು ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಆತನನ್ನು ಕುಣಿಕೆಯಿಂದ ಇಳಿಸಿ, ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಆದರೆ ರವಿವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.