ಬೈಕ್-ಕಾರು ಡಿಕ್ಕಿ, ಆರು ಜನರ ಸಾವು

Advertisement

ಪಾಲಬಾವಿ(ರಾಯಬಾಗ): ರಾಯಬಾಗ ತಾಲೂಕು ಮುಗಳಖೋಡ ಬಸವ ನಗರ ಬಳಿ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಜನ ಧಾರುಣ ರೀತಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಮೂಡಲಗಿ ತಾಲೂಕು ಗುರ್ಲಾಪುರದಿಂದ ಹಾರೂಗೇರಿ ಪಟ್ಟಣಕ್ಕೆ ಹೊರಟಿದ್ದ ಕಾರು ಹಾಗೂ ಎರಡು ಬೈಕ್‌ಗಳ ನಡುವೆ ಈ ಭೀಕರ ಅಪಘಾತ ನಡೆದಿದೆ. ಸಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿದ ಕಾರಣ ಬೈಕ್‌ಗಳಿಗೆ ಗುದ್ದಿ ಕಾರು ಪಲ್ಟಿಯಾಗಿ ಮರಕ್ಕೆ ರಭಸವಾಗಿ ಗುದ್ದಿದರಿಂದ ಸ್ಥಳದಲ್ಲಿಯೇ ಆರು ಜನ ಮೃತಪಟ್ಟರೆ ಇನ್ನೊಬ್ಬ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತಪಟ್ಟವರಲ್ಲಿ ಗುರ್ಲಾಪುರ ಗ್ರಾಮದ ಲಕ್ಷ್ಮಿ ರಾಮಪ್ಪ ಮರಾಠೆ(೧೯), ಮಲ್ಲಿಕಾರ್ಜುನ ರಾಮಪ್ಪ ಮರಾಠೆ(೧೬), ಆಕಾಶ ರಾಮಪ್ಪ ಮರಾಠೆ(೧೪), ಶಿಫ್ಟ್ ಕಾರ್ ಚಾಲಕ ಏಕನಾಥ ಭೀಮಪ್ಪ ಪಡತರೆ(೨೨), ಮುಗಳಖೋಡ ಪಟ್ಟಣದ ಎಕ್ಸೆಲ್ ಸೂಪರ್ ಬೈಕ್ ಸವಾರ ನಾಗಪ್ಪ ಲಕ್ಷ್ಮಣ ಯಡವಣ್ಣವರ(೪೮), ಗೋಕಾಕ ತಾಲೂಕಿನ ದುರದುಂಡಿ ಗ್ರಾಮದ ಶಿಕ್ಷಕ ಹಣಮಂತ ಮಾಳಪ್ಪ ಮಳ್ಯಾಗೋಳ(೪೨) ಮೃತಪಟ್ಟಿದ್ದಾರೆ. ಗೋಕಾಕ ಪಟ್ಟಣದ ನಿವಾಸಿ ಹೋಂಡಾ ಶೈನ್ ಬೈಕ್ ಸವಾರ ಬಾಲಾನಂದ ಪರಪ್ಪ ಮಾಳಗೆ ಹಾರೂಗೇರಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.