ಕರ್ತವ್ಯ ಲೋಪ: ಪಿಡಿಓ ಅಮಾನತು

Advertisement

ಕುಷ್ಟಗಿ: ಕರ್ತವ್ಯ ಲೋಪ ಆರೋಪದಡಿ ಕಿಲ್ಲಾರಹಟ್ಟಿ ಗ್ರಾಪಂ ಪಿಡಿಓ ರಾಮಣ್ಣ ದಾಸರ ಅವರನ್ನು ಅಮಾನತುಗೊಳಿಸಿ ಕೊಪ್ಪಳ ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ ಆದೇಶ ಹೊರಡಿಸಿದ್ದಾರೆ.
ನರೇಗಾ ಯೋಜನೆ ಅಡಿ ೨೦೨೩-೨೪ನೇ ಸಾಲಿನ ೩೩೧ ಕಾಮಗಾರಿ ಚಾಲ್ತಿಯಲ್ಲಿದ್ದು, ಅದರಲ್ಲಿ ಕೇವಲ ಐದು ಕಾಮಗಾರಿಗೆ ಮಾತ್ರ ಎಫ್.ಟಿ.ಓ ಮಾಡಲಾಗಿದೆ. ಆರ್ಥಿಕ ವರ್ಷದಲ್ಲಿ ೧೧ ತಿಂಗಳು ಕಳೆದರೂ ೩೨೬ ಕಾಮಗಾರಿಗೆ ಹಣ ಪಾವತಿ ಮಾಡಿಲ್ಲ ಎಂಬ ಆರೋಪ ಪಿಡಿಓ ವಿರುದ್ಧ ಕೇಳಿಬಂದಿತ್ತು.
ಫೆ. ೧೪ರಂದು ಕಿಲ್ಲಾರಹಟ್ಟಿ ಗ್ರಾಪಂಗೆ ಭೇಟಿ ನೀಡಿದ ಜಿಪಂ ಸಿಇಓ ಸಭೆ ನಡೆಸಿದ್ದರು. ಅಧ್ಯಕ್ಷ, ಸದಸ್ಯರು ಮತ್ತು ಸಾರ್ವಜನಿಕರು ಪಿಡಿಓ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಪರಿಶೀಲಿಸಿ ವರದಿ ಸಲ್ಲಿಸುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಸಿಇಓ ಸೂಚಿಸಿದ್ದರು. ಅದರಂತೆ ತಾಪಂ ಇಓ ಪಿಡಿಓ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಿ ವರದಿ ಸಲ್ಲಿಸಿದ್ದರು. ಪಿಡಿಓ ವಿರುದ್ಧ ಶಿಸ್ತು ಕ್ರಮಕ್ಕೂ ವರದಿಯಲ್ಲಿ ಶಿಫಾರಸ್ಸು ಮಾಡಿದ್ದರು.