ಜಿಲ್ಲೆಯ ನಾಯಕರಿಗೆ ನಿಗಮ ಮಂಡಳಿ ಸ್ಥಾನ

Advertisement

ಹುಬ್ಬಳ್ಳಿ : ನವಲಗುಂದ ಶಾಸಕನಾಗುವ ಕನಸು ಹೊತ್ತು ಕಳೆದ ಬಾರಿ ಟಿಕೆಟ್ ವಂಚಿತರಾದ ವಿನೋದ ಅಸೂಟಿಗೆ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಸ್ಥಾನ, ಧಾರವಾಡ ಲೋಕ ಸಭಾ ಕ್ಷೇತ್ರ ಕಾಂಗ್ರೆಸ್ ಟಿಕೆಟ್ ಗೆ ಪ್ರಬಲವಾಗಿ ಪೈಪೋಟಿ ನಡೆಸಿದ್ದ ಮಾಜಿ ಸಂಸದ ಪ್ರೊ.ಐ.ಜಿ ಸನದಿ ಅವರ ಪುತ್ರ ಶಾಕೀರ ಸನದಿ ಅವರಿಗೆ ಹು- ಧಾ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದಾರೆ.

ಧಾರವಾಡ ಲೋಕ ಸಭಾ ಕ್ಷೇತ್ರಕ್ಕೆ ಈ ಬಾರಿ ತಮಗೇ ಟಿಕೆಟ್ ಕೊಡಲೇಬೇಕು. ಅಲ್ಪಸಂಖ್ಯಾತರ ಕೋಟಾದಲ್ಲಿ ಟಿಕೆಟ್ ನೀಡಲೇಬೇಕು ಎಂದು ಬೆಂಗಳೂರಿನಿಂದ ದೆಹಲಿವರೆಗಿನ ಎಲ್ಲ ನಾಯಕರಿಗೂ ಶಾಕೀರ ಸನದಿ ಮನವಿ ಮಾಡಿಕೊಂಡು ಬಂದಿದ್ದರು.

ಆದರೆ, ಈಗ ಅವರಿಗೆ ನಗರಾಭಿವೃದ್ಧಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಧಾರವಾಡ ಲೋಕಸಭಾ ಟಿಕೆಟ್ ಬೇರೆ ಯವರಿಗೆ ಎಂಬ ಸಂದೇಶ ರವಾನಿಸಿದ್ದಾರೆ.

ವಿಧಾನ ಸಭೆ ಚುನಾವಣೆಯಲ್ಲಿ ನವಲಗುಂದ ಕ್ಷೇತ್ರಕ್ಕೆ ಟಿಕೆಟ್ ಸಿಗದೇ ವಂಚಿತರಾದ ಬಳಿಕ ಪಕ್ಷದ ಸಂಘಟನೆ, ಕಾರ್ಯ ಚಟುವಟಿಕೆಯಲ್ಲಿ ಸಕ್ರಿಯರಾಗಿಲ್ಲದೇ ದೂರ ಉಳಿಯುವ ಮೂಲಕ ಪಕ್ಷದ ನಾಯಕರಿಗೆ ತಮ್ಮ ಅಸಮಾಧಾನ ಸಂದೇಶ ರವಾನಿಸಿದ್ದ ವಿನೋದ ಅಸೂಟಿಯವರನ್ನು ಒಂಚೂರು ಸಮಾಧಾನಪಡಿಸಿ ಲೋಕಸಭಾ ಚುನಾವಣೆಯಲ್ಲಿ ಅವರಿಗಿರುವ ಜನಬಲವನ್ನು ಸಮರ್ಥವಾಗಿ ಬಳಸಿಕೊಳ್ಳುವ ತಂತ್ರದ ಭಾಗವಾಗಿ ಅವರಿಗೆ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಅಸೂಟಿ ಅವರ ಆಪ್ತರು ಹೇಳುವ ಮಾತು.