ಸೈನಿಗೆ ದಕ್ಕಿದ ವಿಶ್ವಾಸಮತ

Advertisement

ಚಂಡೀಗಢ: ಹರಿಯಾಣದಲ್ಲಿ ನಯಾಬ್ ಸಿಂಗ್ ಸೈನಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಒಂದೇ ದಿನದಲ್ಲಿ ವಿಧಾನಸಭೆಯಲ್ಲಿ ವಿಶ್ವಾಸಮತವನ್ನೂ ಗೆದ್ದಿದ್ದಾರೆ. ಆತ್ಮವಿಶ್ವಾಸದಿಂದಲೇ ವಿಶ್ವಾಸಮತ ಗೊತ್ತುವಳಿ ಮಂಡಿಸಿದ ಅವರು, ಧ್ವನಿಮತ ಮೂಲಕ ಗೆಲುವು ಸಾಧಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ೪೧ ಶಾಸಕರಿರುವುದಲ್ಲದೆ, ೬ ಪಕ್ಷೇತರ ಹಾಗೂ ಹರಿಯಾಣ ಲೋಕಹಿತ ಪಾರ್ಟಿಯ ಗೋಪಾಲ್ ಕಾಂಡ ಅವರ ಬೆಂಬಲವನ್ನೂ ಹೊಂದಿದೆ. ಲೋಕಸಭಾ ಚುನಾವಣೆಗೆ ಕೆಲವೇ ವಾರಗಳಿರುವಾಗ ಮೈತ್ರಿ ಮುರಿದು ಬಿದ್ದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಬಿಜೆಪಿ ಜೊತೆ ಮೈತ್ರಿ ಹೊಂದಿದ್ದ ಜನನಾಯಕ ಜನತಾ ಪಾರ್ಟಿ(ಜೆಜೆಪಿ)ಯು ಕಳೆದ ಲೋಕಸಭಾ ಚುನಾವಣೆಯಲ್ಲಿ ಒಂದೇ ಒಂದು ಸೀಟು ಗೆಲ್ಲದಿದ್ದರೂ ಈ ಬಾರಿ ಎರಡು ಲೋಕಸಭಾ ಸ್ಥಾನಗಳಿಗೆ ಪಟ್ಟು ಹಿಡಿದಿರುವುದು ಮೈತ್ರಿ ಮುರಿದುಬೀಳಲು ಕಾರಣವಾಗಿದೆ. ಹೀಗಾಗಿ ಜೆಜೆಪಿಯು ಸರ್ಕಾರದಿಂದ ಹೊರಬಂದಿರುವುದರಿಂದ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ಸೇರಿ ಸಚಿವ ಸಂಪುಟ ಮಂಗಳವಾರ ರಾಜೀನಾಮೆ ನೀಡಿದ್ದು ಸಂಸದ ನಯಾಬ್ ಸಿಂಗ್ ಸೈನಿ ಮುಖ್ಯಮಂತ್ರಿಯಾದರು.
ಈ ದಿನದ ಬಲಾಬಲ ಪರೀಕ್ಷೆಯಲ್ಲಿ ಜನನಾಯಕ ಜನತಾ ಪಾಟಿಯ ಐವರು ಶಾಸಕರು ಭಾಗವಹಿಸಿದ್ದರು. ಆದರೆ ಧ್ವನಿ ಮತ ವೇಳೆ ಈ ಶಾಸಕರು ಸಭಾತ್ಯಾಗ ಮಾಡಿದರು. ವಿಶ್ವಾಸಮತ ಕಲಾಪಕ್ಕೆ ಗೈರುಹಾಜರಾಗುವಂತೆ ತನ್ನ ೧೦ ಶಾಸಕರಿಗೆ ಜೆಜೆಪಿ ಸಚೇತಕಾಜ್ಞೆ ಹೊರಡಿಸಿತ್ತು. ಈ ನಡುವೆ ಸೈನಿ ಮುಖ್ಯಮಂತ್ರಿಯಾಗಿರುವುದಕ್ಕೆ ಅಸಮಾಧಾನಗೊಂಡಿದ್ದ ಬಿಜೆಪಿಯ ಹಿರಿಯ ಶಾಸಕ ಅನಿಲ್ ವಿಜ್ ಕೂಡಾ ಬಲಾಬಲ ಪರೀಕ್ಷೆಯಲ್ಲಿ ಭಾಗಿಯಾಗಿ ಸೈನಿಗೆ ಬೆಂಬಲ ನೀಡಿದ್ದರು.