ಅಭಿಪ್ರಾಯ ಭೇದ ಮರೆತು ಬಿಜೆಪಿ ಗೆಲುವಿಗೆ ಪ್ರಯತ್ನಿಸೋಣ

Advertisement

ಸಿದ್ದಾಪುರ: ನಡೆಯಲಿರುವ ಲೋಕಸಭಾ ಚುನಾವಣೆ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನಡೆಯುವ ಚುನಾವಣೆಯಲ್ಲ. ಇದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಡುವೆ ನಡೆಯುವ ಚುನಾವಣೆ. ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕಾದರೆ ಪಕ್ಷದ ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಮನೆಮನೆಗೂ ತಲುಪಿಸಬೇಕಾಗಿದೆ. ಉತರ ಕನ್ನಡ ಜಿಲ್ಲೆ, ಕಿತ್ತೂರು ಖಾನಾಪುರ ಸೇರಿದಂತೆ ಈ ಕ್ಷೇತ್ರ ಬಿಜೆಪಿಯದ್ದಾಗಿದೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಪಟ್ಟಣದ ಹೊಸೂರಿನಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಪುನಃ ದೇಶದ ಪ್ರಧಾನಿ ಆಗಬೇಕು ಎಂದು ಭಾರತದ ಪ್ರಜೆಗಳು ಮಾತ್ರವಲ್ಲದೇ ಇಡೀ ವಿಶ್ವದ ನಾಯಕರು ಹೇಳುತ್ತಿದ್ದಾರೆ. ನರೇಂದ್ರ ಮೋದಿ ಅವರು ವಿಶ್ವದ ನಾಯಕರಾಗುತ್ತಿರುವುದು ಸಂತಸ ತಂದಿದೆ ಎಂದರು.
ನಮ್ಮಲ್ಲಿ ಅಭಿಪ್ರಾಯ ಭೇದಗಳಿರಬಹುದು. ಹಿಂದಿನ ಕಹಿ ಘಟನೆ ಮರೆತು ನಾವೆಲ್ಲರೂ ಒಂದಾಗಿ ಬಿಜೆಪಿಯನ್ನು ಗೆಲ್ಲಿಸಬೇಕು. ಮೋದಿಯವರನ್ನು ಪ್ರಧಾನಮಂತ್ರಿ ಮಾಡುವುದಕ್ಕೆ ಎಲ್ಲರೂ ಸೇರಿ ಪ್ರಯತ್ನಿಸಬೇಕು. ಯಾವುದೇ ನಿರ್ಲಕ್ಷö್ಯ ಮಾಡದೇ ಕಾರ್ಯಕರ್ತರು ಪಕ್ಷದ ಗೆಲುವಿಗೆ ಪ್ರಯತ್ನಿಸಬೇಕು. ಸಂಸದ ಅನಂತಕುಮಾರ ಹೆಗಡೆ ಅವರ ಸಲಹೆ, ಸೂಚನೆ ಪಡೆದು ಮುಂದುವರೆಯುತ್ತೇನೆ. ಜಿಲ್ಲಾಧ್ಯಕ್ಷರು ಈಗಾಗಲೇ ಸಂಸದರನ್ನು ಭೇಟಿ ಮಾಡಿ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿಕೊಂಡಿದ್ದಾರೆ ಎಂದು ಹೇಳಿದರು.