ಮೀಸಲಾತಿ ಕೊಡುವ ಯೋಗ್ಯತೆ ಸಿದ್ದರಾಮಯ್ಯರಿಗಿಲ್ಲ: ಕಟೀಲ್‌

ಕಟೀಲ್
Advertisement

ಹಾವೇರಿ: ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದವರು, ಆ ಸಂದರ್ಭದಲ್ಲಿ ಯಾಕೆ ಮೀಸಲಾತಿ ಕೊಡಲಿಲ್ಲ. ಸಿಎಂ ಇದ್ದಾಗ ನ್ಯಾಯ ಕೊಡುವ ಕೆಲಸ ಮಾಡದೆ, ನಮ್ಮ ಸರ್ಕಾರ ಮೀಸಲಾತಿ ಕೊಟ್ಟಾಗ ಅಸಮಾಧಾನ ವ್ಯಕ್ತಪಡಿಸುವುದು ಯಾವ ನ್ಯಾಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ ಕಿಡಿಕಾರಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಸಿಎಂ ಆಗಿ ಐದು ವರ್ಷ ಅಧಿಕಾರದಲ್ಲಿದ್ದರು. ಅಹಿಂದ ಚಳವಳಿ ಮಾಡಿ ಹಿಂದುಳಿದ ವರ್ಗಗಳಿಗೆ ನ್ಯಾಯವನ್ನೇ ಕೊಡಲಾಗಲಿಲ್ಲ. ಆ ಭೀಕ್ಷೆಯಡಿಯಲ್ಲಿ, ಆ ಕೋಟಾದಡಿಯಲ್ಲಿ ಸಿಎಂ ಆಗಿದ್ದರು. ಅವರ ಕಾಲಘಟ್ಟದಲ್ಲಿ ಮೀಸಲಾತಿ ಕೊಡುವ ಯೋಗ್ಯತೆ ಅವರಿಗೆ ಇರಲಿಲ್ಲ. ಅದನ್ನ ಮುಚ್ಚಿ ಹಾಕಲು ಒಂದು ಆಯೋಗ ಮಾಡಿ ಅಲ್ಲಿಗೆ ಮುಚ್ಚಿ ಹಾಕಿದ್ರು. ಇವರ ಕಾಲದಲ್ಲಿ ಏನು ತೀರ್ಮಾನ ತೆಗೆದುಕೊಳ್ಳಲಾಗದ ಸಿಎಂ ಆಗಿದ್ದರು. ವೀರಶೈವ ಲಿಂಗಾಯತ ಸಮಾಜವನ್ನು ಒಡೆದಾಳಿದ್ರು. ಇದನ್ನ ಬಿಟ್ಟು ಒಳ್ಳೆಯದು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಈಗಾಗಲೇ ಎರಡು ಸಮುದಾಯದ ಬೇಡಿಕೆ ಈಡೇರಿಸುವ ಕೆಲಸ ನಮ್ಮ ಸರಕಾರ ಮಾಡಿದೆ. ಮುಂದಕ್ಕೆ ಹತ್ತಾರು ಬೇಡಿಕೆ ಇದ್ದು, ಆ ಕೆಲಸವನ್ನ ಸರಕಾರ ಮಾಡುತ್ತದೆ. ಮೀಸಲಾತಿ ನೀಡಿದ್ದೇವೆ, ನಾವು ಅದರ ಕ್ರೇಡಿಟ್ ತೆಗೆದುಕೊಳ್ಳುತ್ತೇವೆ. ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಕೇಂದ್ರ ಸರಕಾರ ಕೊಟ್ಟ ಅನ್ನಭಾಗ್ಯವನ್ನ ನಾವು ಕೊಟ್ಟಿದ್ದೆವೆ ಅಂತಾ ಪೋಟೋ ಹಾಕಿಕೊಂಡು ತಿರಗಿದ್ದಾರೆ ಇವರದ್ದೇನು ಇದೆ ಅದರಲ್ಲಿ. ದೇಶದಲ್ಲಿ ಭ್ರಷ್ಟಾಚಾರ ಪ್ರಾರಂಭ ಮಾಡಿದ್ದು ಕಾಂಗ್ರೆಸ್. ಭ್ರಷ್ಟಾಚಾರದ ಇನ್ನೊಂದು ಹೆಸರೇ ಕಾಂಗ್ರೆಸ್. ಭಯೋತ್ಪಾದನೆಯ ಇನ್ನೊಂದು ಹೆಸರೆ ಕಾಂಗ್ರೆಸ್. ಭ್ರಷ್ಟಾಚಾರದ ಒಂದು ಫಲಾನುಭವಿ ರಾಹುಲ್‌ ಗಾಂಧಿ ಅದಕ್ಕೊಸ್ಕರ ಬೇಲ್ ಮೇಲೆ ಆಚೆಯಿದ್ದಾರೆ ಎಂದು ಹೇಳಿದರು.