ನಿವೃತ್ತ ಪೊಲೀಸ್ ಅಧಿಕಾರಿಗೆ ನೋಟು ನಿವಾಳಿಸಿದ ರೌಡಿಶೀಟರ್?

ನೋಟು
Advertisement

ಧಾರವಾಡ: ಇಲ್ಲಿನ ಟೋಲನಾಕಾ ಹತ್ತಿರ ಆಯೋಜಿಸಿದ್ದ ಕವ್ವಾಲಿ ಕಾರ್ಯಕ್ರಮದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿಗೆ ರೌಡಿಶೀಟರ್ ಒಬ್ಬ ನೋಟು ನಿವಾಳಿಸಿ ತೂರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.
ಕವ್ವಾಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಆಮ್ ಆದ್ಮಿ ಪಕ್ಷದ ಮುಖಂಡ ಭಾಸ್ಕರ್ ರಾವ್ ಅವರ ಮುಖಕ್ಕೆ ರೌಡಿ ಶೀಟರ್ ಎನ್ನಲಾದ ವ್ಯಕ್ತಿ ನೋಟು ನಿವಾಳಿಸಿದ್ದಾನೆ. ಬಳಿಕ ಗಾಯಕರ ಮೇಲೆ ತೂರಿದ್ದಾನೆ. ಮುಖಂಡರು ರೌಡಿಶೀಟರ್ ಜತೆಗೆ ವೇದಿಕೆ ಹಂಚಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ. ಈ ಕಾರ್ಯಕ್ರಮಕ್ಕೆ ಶಾಸಕ ಅರವಿಂದ ಬೆಲ್ಲದ ಅವರೂ ಭೇಟಿ ನೀಡಿದ್ದರೆನ್ನಲಾಗಿದೆ.
ಶಾಸಕರ ಪ್ರತಿಕ್ರಿಯೆ:
ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಅರವಿಂದ ಬೆಲ್ಲದ, ಕವ್ವಾಲಿ ಹಾಡುಗಾರರ ಮೇಲೆ ನೋಟು ತೂರಲಾಗಿದೆ. ಸಮಾರಂಭಕ್ಕೆ ನೂರಾರು ಜನರು ಬಂದಿದ್ದರು. ವೇದಿಕೆ ಜನರಿಂದ ತುಂಬಿ ತುಳುಕುತ್ತಿತ್ತು. ಅದೊಂದು ಸಂಗೀತ ಕಾರ್ಯಕ್ರಮ. ನನಗೆ ಆಹ್ವಾನ ನೀಡಿದ್ದರಿಂದ ಭಾಗವಹಿಸಿದ್ದೆ. ಕಾರ್ಯಕ್ರಮಕ್ಕೆ ಹೋದರೂ ಮಾತನಾಡುತ್ತಾರೆ, ಹೋಗದಿದ್ದರೂ ಮಾತನಾಡುತ್ತಾರೆ. ನಮ್ಮ ಪಕ್ಷದ ಕಾರ್ಯಕರ್ತರು ಆಹ್ವಾನ ನೀಡಿದ್ದರಿಂದ ಕಾರ್ಯಕ್ರಮಕ್ಕೆ ಹೋಗಿ ಶುಭ ಹಾರೈಸಿ ಬಂದಿದ್ದೇನೆ ಎಂದು ತಿಳಿಸಿದರು.