ರೈಲಿನಲ್ಲಿ ಮಹಿಳೆಗೆ ಚಾಕು ಹಾಕಲು ಯತ್ನಿಸಿದ್ದ ಅಂಜಲಿ ಹಂತಕ

Advertisement

ದಾವಣಗೆರೆ: ಹುಬ್ಬಳ್ಳಿಯ ಜನತೆಯನ್ನು ಮತ್ತೊಮ್ಮೆ ಬೆಚ್ಚಿಬೀಳಿಸಿರುವ ಅಂಜಲಿ ಕೊಲೆ ಪ್ರಕರಣದ ಆರೋಪಿ ವಿಶ್ವ ಮತ್ತೊಬ್ಬ ಮಹಿಳೆಯನ್ನು ಹತ್ಯೆಗೈಯಲು ಯತ್ನಿಸಿ ದಾವಣಗೆರೆಯಲ್ಲಿ ಗುರುವಾರ ತಡರಾತ್ರಿ ಪೊಲೀಸರಿಗೆ ಸೆರೆಸಿಕ್ಕಿದ್ದಾನೆ.

ವಿಶ್ವಮಾನವ ಎಕ್ಸ್ಪ್ರೆಸ್ ರೈಲಿನಲ್ಲಿ ಆರೋಪಿ ವಿಶ್ವ ತಲೆಮರೆಸಿಕೊಳ್ಳಲು ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ದ ಇದೇ ಸಂದರ್ಭದಲ್ಲಿ ತುಮಕೂರಿನಿಂದ ಪ್ರಯಾಣ ಬೆಳೆಸಿದ್ದ ಲಕ್ಷ್ಮೀ ಎಂಬ ಮಹಿಳೆ ರೈಲಿನಲ್ಲಿ ಆತ ನೋಡುವ ದೃಷ್ಟಿ ಸರಿ ಇಲ್ಲ ಎಂದು ವಿಶ್ವನೊಂದಿಗೆ ಜಗಳಕ್ಕಿಳಿದಿದ್ದಾಳೆ. ಇದರಿಂದ ಸಿಟ್ಟಾಗಿದ್ದ ವಿಶ್ವ ಮಹಿಳೆ ಶೌಚಾಲಯಕ್ಕೆ ಹೋಗಿ ಬಾಗಿಲು ತೆರೆಯುತ್ತಿದ್ದಂತೆ ಆಕೆಗೆ ಚಾಕು ಹಾಕಿದ್ದಾನೆ. ಅದೃಷ್ಟವಶಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದು, ಮಹಿಳೆಯ ಎಡಗೈಗೆ ಚಾಕು ತಗುಲಿದೆ, ಸ್ಥಳದಲ್ಲಿದ್ದ ಜನರು ಕೂಡಲೇ ಆತನನ್ನು ಹಿಡಿದು ಥಳಿಸಿದ್ದಾರೆ.

ಜನರಿಂದ ತಪ್ಪಿಸಿಕೊಳ್ಳಲು ಆರೋಪಿ ವಿಶ್ವ ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಬಳಿ ರೈಲಿನಿಂದ ಧುಮುಕಿದ್ದಾನೆ. ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ರೈಲ್ವೆ ಪೋಲೀಸರು ಅರೋಪಿಯನ್ನು ಹಾಗೂ ಹಲ್ಲೆಗೊಳಗಾದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಗ ಮಾಧ್ಯಮಗಳಲ್ಲಿ ವಿಶ್ವನ ಪೋಟೋ ನೋಡಿ ಕೊಲೆ ಅರೋಪಿ ಎಂದು ರೈಲ್ವೆ ಪೊಲೀಸರು ಗುರುತಿಸಿ, ಕೂಡಲೇ ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹಲ್ಲೆಗೊಳಗಾದ ಮಹಿಳೆ ಲಕ್ಷ್ಮೀ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ತೆರಳಿದ್ದಾರೆ ಎನ್ನಲಾಗಿದೆ.