ಪಂಚಮಸಾಲಿ ಎಂದು ನಮೂದಿಸಲು ಜನಜಾಗೃತಿ ಪ್ರವಾಸ: ವಚನಾನಂದ ಶ್ರೀ

ಪಂಚಮಸಾಲಿ
Advertisement

ದಾವಣಗೆರೆ: ಸಮಾಜದ ಬಹುತೇಕರ ದಾಖಲೆಗಳಲ್ಲಿ ಈಗಲೂ ಹಿಂದೂ ಲಿಂಗಾಯತ ಎಂದೇ ದಾಖಲಾಗಿದ್ದು, ಸರ್ಕಾರ ನಾಳೆ 2ಎ ಮೀಸಲಾತಿ ನೀಡಿದರೂ ಅದನ್ನು ಪಡೆದುಕೊಳ್ಳುವಲ್ಲಿ ತಾಂತ್ರಿಕ ತೊಂದರೆಯಾಗಲಿದೆ. ಆದ್ದರಿಂದ ಶಾಲಾ ದಾಖಲೆ ಸೇರಿದಂತೆ ಜಾತಿ ಕಾಲಂನಲ್ಲಿ ಪಂಚಮಸಾಲಿ ಎಂದು ನಮೂದಿಸುವ ಬಗ್ಗೆ ಸಮಾಜದವರಿಗೆ ಜಾಗೃತಿ ಮೂಡಿಸಲು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗುವುದು ಎಂದು ಹರಿಹರ ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.
ಹರಿಹರದ ಹೊರವಲಯದಲ್ಲಿರುವ ಪೀಠದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಈಗಾಗಲೇ ಗದಗ ಜಿಲ್ಲೆಯ 60 ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿದ್ದು, ಹಾವೇರಿ, ವಿಜಯನಗರ ಜಿಲ್ಲೆಗಳಲ್ಲಿ ಪ್ರವಾಸ ಮಾಡುವುದಾಗಿ ತಿಳಿಸಿದರು. ಸರ್ಕಾರಕ್ಕೆ ಪಂಚಮಸಾಲಿ ಸಮಾಜದ ಶಕ್ತಿಯ ಬಗ್ಗೆ ಅರಿವಿದ್ದು, ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮುಖಂಡರ ಮಧ್ಯೆ ಮಾತುಕತೆಗಳು ನಡೆದಿದೆ. ಸಕಾರಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿವೆ. ಸರ್ಕಾರ ಶೀಘ್ರದಲ್ಲೇ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಶ್ವಾಸವಿದೆ ಎಂದರು.