ಕಾಂಗ್ರೆಸ್‌ನವರಿಗೆ ಹಿಂದೂ ಪದವೇ ಅಲರ್ಜಿ: ಜಗದೀಶ್ ಶೆಟ್ಟರ್

Jagdish Shettar
Advertisement

ಹುಬ್ಬಳ್ಳಿ: ಕಾಂಗ್ರೆಸ್ ನಾಯಕರಿಗೆ ಹಿಂದೂ ಪದವೇ ಅಲರ್ಜಿಯಾಗಿದೆ. ಚರ್ಚೆಯಾಗದ ವಿಷಯವನ್ನು ಚುನಾವಣೆ ಸಮೀಪದಲ್ಲಿ ತೆಗೆದುಕೊಂಡು ಬರುವುದೇ ಅವರ ಅಜ್ಞಾನವನ್ನು ತೋರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಿಡಿಕಾರಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಯಾವಾಗಲೂ ಹಿಂದೂ ಪರಂಪರೆ, ಸಂಸ್ಕೃತಿಯನ್ನು ಟೀಕಿಸಿದಾಗಲೇ ಸಮಾಧಾನ ಆಗುತ್ತದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನವರು ಹಿಂದೂಗಳ ವಿರೋಧಿ ಎಂದು ತೋರಿಸಿಕೊಂಡು ಅಲ್ಪಸಂಖ್ಯಾತರನ್ನು ಓಲೈಸಿ ಅವರ ಮತಗಳನ್ನು ಸೆಳೆಯುವ ಸಲುವಾಗಿ ಈ ತರಹ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಹುಲ್‌ ಗಾಂಧಿ ಕೂಡಾ ತಾವು ಹಿಂದೂ ಎಂದು ಹೇಳುತ್ತಾರೆ. ಜನಿವಾರ ತೋರಿಸುತ್ತಾರೆ. ಇತ್ತಿಚೆಗೆ ಅವರಿಗೆ ಹಿಂದೂಗಳ ಮತಗಳು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಅವರೇ ಹಿಂದೂ ಎಂಬುದನ್ನು ಪ್ರಾರಂಭ ಮಾಡಿದ್ದಾರೆ. ಹಿಂದೂ ಪದದ ಬಗ್ಗೆ ಚರ್ಚೆ ಮಾಡುವುದೇ ಅನಾವಶ್ಯಕ. ಹಿಂದೂಗಳ ಭಾವನೆಗಳಿಗೆ ದಕ್ಕೆ ತರುವ ಕೆಲಸ ಆಗುತ್ತಿದೆ.
ಇದು ಸರಿಯಲ್ಲ. ಒಂದು ವೇಳೆ ಸತೀಶ್ ಜಾರಕಿಹೊಳಿ ಹಿಂದೂ ಬಗ್ಗೆ ಹೇಳಿಕೆ ನೀಡಿರುವುದು ವೈಯಕ್ತಿಕವಾಗಿದ್ದರೇ ಅವರನ್ನು ಪಕ್ಷದಿಂದ ತೆಗೆದು ಹಾಕುತ್ತಾರೆಯೇ ಎಂದು ಪ್ರಶ್ನೆ ಮಾಡಿದರು‌.
ಸತೀಶ ಜಾರಕಿಹೊಳಿ ಒಬ್ಬ ಕಾರ್ಯಕರ್ತರಲ್ಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದಾರೆ. ಇದೆಲ್ಲ ಅಲ್ಪಸಂಖ್ಯಾತರನ್ನು ಓಲೈಸುವ ಹುನ್ನಾರ ಆಗಿದೆ. ಇದರಿಂದ ಕಾಂಗ್ರೆಸ್ ಪಕ್ಷ ದಿನದಿಂದ ದಿನಕ್ಕೆ ಅದೋಗತಿಗೆ ಹೋಗುತ್ತಿದೆ‌ ಎಂದರು.
ಸಚಿವ ಬೈರತಿ ಬಸವರಾಜ ಮೇಲೆ ಬಂದಿರುವ ಭ್ರಷ್ಟಾಚಾರ ಆರೋಪದ ಕುರಿತು ಮಾತನಾಡಿದ ಅವರು, ಯಾರೇ ಆಗಲಿ ತಪ್ಪು ಮಾಡಿದ ಕ್ರಮ ಆಗಬೇಕು. ಇದೀಗ ಲಂಚದ ಆರೋಪ ಬಂದಾಗ ಲೋಕಾಯುಕ್ತಕ್ಕೆ ದೂರು ಕೊಡಲಿ, ತನಿಖೆ ಆಗಲಿ. ಕೇವಲ ಹಿಟ್ ಆ್ಯಂಡ್ ರನ್ ಆಗಬಾರದು ಎಂದರು.