ಸತೀಶ ಜಾರಕಿಹೊಳಿಯಿಂದ ಸ್ಪಷ್ಟನೆ ಪಡೆಯುತ್ತೇನೆ: ಡಿಕೆಶಿ

DKC
Advertisement

ಹುಬ್ಬಳ್ಳಿ: ಸತೀಶ ಜಾರಕಿಹೊಳಿ ಅವರು ಹಿಂದೂ ಎಂಬ ಪದಕ್ಕೆ ಅಶ್ಲೀಲ ಅರ್ಥವಿದೆ ಎಂಬ ಹೇಳಿಕೆ ನೀಡಿರುವುದನ್ನು ಪಕ್ಷ ತಳ್ಳಿ ಹಾಕುತ್ತದೆ. ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಅದರಿಂದ ನಮ್ಮ ಪಕ್ಷಕ್ಕೆ ಯಾವುದೇ ನಷ್ಟ ಆಗುವುದಿಲ್ಲ. ಈ ಬಗ್ಗೆ ಅವರಲ್ಲಿ ಸ್ಪಷ್ಟೀಕರಣ ಪಡೆದುಕೊಳ್ಳುತ್ತೇನೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೂಡಾ ಒಬ್ಬ ಹಿಂದೂ ಧರ್ಮದವ. ನಮಗೆ ನಮ್ಮದೇಯಾದ ಇತಿಹಾಸವಿದೆ. ಹಾಗಾಗಿ ಸತೀಶ ಹೇಳಿಕೆ ಅವರ ವೈಯಕ್ತಿಕ ವಿಚಾರ. ಅವರು ತಮ್ಮ ಮನೆಯಲ್ಲಿ ಮಾತನಾಡಿದರೇ ಏನೂ ಆಗುವುದಿಲ್ಲ. ಆದರೆ ಸಾರ್ವಜನಿಕ ಬದುಕಿನಲ್ಲಿ ಈ ತರಹ ಹೇಳಿಕೆ ನೀಡುವುದು ಖಂಡನೀಯ ಎಂದರು.
ಕಾಂಗ್ರೆಸ್ ಭಾರತ ಜೋಡೋ ಯಾತ್ರೆಯಿಂದ ಬಿಜೆಪಿಗೆ ಭಯವುಂಟಾಗಿದೆ. ಈ ಹಿಂದೆ ಗಾಂಧೀಜಿ ಭಾರತ ಜೋಡೋ ಮಾಡಿದ್ದರು. ಆ ನಂತರ ಮೋದಿ ಭಾರತ ತೋಡೋ ಮಾಡುತ್ತಾ ಇದ್ದಾರೆ. ರಾಹುಲ ಗಾಂಧಿ ಭಾರತ ಜೋಡೋ ಮಾಡುತ್ತಿದ್ದಾರೆ. ಇದೇ ನಮಗೂ ಅವರಿಗೆ ಇರುವ ವ್ಯತ್ಯಾಸ. ಇದನ್ನು ಸಹಿಸಲಾಗದೇ ಬಿಜೆಪಿಯವರು ಭಾರತ ಜೋಡೋ ನಿಲ್ಲಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಭೈರತಿ ಬಸವರಾಜ ಬೀದಿ ಬದಿ ವ್ಯಾಪಾರಸ್ಥರಿಂದ ಹಣ ಪಡೆದಿರುವ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರಕಾರ ನಿಂತಿರುವುದೇ ಕಮಿಷನ್‌ದಿಂದ. ಇದು ಲಂಚದ ಸರಕಾರ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಉತ್ತರ ಕೊಡಬೇಕು. ಬೀದಿ ಬದಿ ವ್ಯಾಪಾರಿಗಳಿಂದಲೂ ಹಣ ಪಡೆಯುತ್ತಾರೆಂದರೇ ಬಿಜೆಪಿ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂಬುದಕ್ಕೆ ಇದು ಉದಾಹರಣೆ ಎಂದು ಹರಿಹಾಯ್ದರು.
ನ.14 ರಂದು ಇಡಿ ವಿಚಾರಣೆಗೆ ಹಾಜರಾಗಲು ನೋಟೀಸ್ ಬಂದಿದೆ. ಅದೇ ದಿನ ನೆಹರು ಅವರ ಜಯಂತಿ ಇದೆ. ನನ್ನ ಸಹೋದರ ಕೂಡ ಅಲ್ಲೇ ಇದ್ದಾನೆ. ವಕೀಲರೊಂದಿಗೆ ಹಾಜರಾಗುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದರು.