ಚಂದ್ರು ಸಾವು ಪ್ರಕರಣ: ತನಿಖೆ ವರದಿ ಬಳಿಕ ಸಿಗಲಿದೆ ಉತ್ತರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ

ಚಂದ್ರು
Advertisement

ದಾವಣಗೆರೆ: ಚಂದ್ರಶೇಖರ್‌ ಸಾವಿನ ಪ್ರಕರಣವನ್ನು ಎಲ್ಲ ಆಯಾಮಗಳಿಂದ ತನಿಖೆ ನಡೆಸುವವರೆಗೆ ಪೊಲೀಸರು ಯಾವುದೇ ತೀರ್ಮಾನಕ್ಕೆ ಬರಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಜಿಲ್ಲೆಯ ಹೊನ್ನಾಳಿಗೆ ಬುಧವಾರ ತೆರಳಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಣೋತ್ತರ ಪರೀಕ್ಷೆಯ ವರದಿ ಇನ್ನೆರಡು ದಿನಗಳಲ್ಲಿ ಬರಲಿದೆ. ಅದರ ಆಧಾರದಲ್ಲಿ ತನಿಖೆ, ವಿಧಿ ವಿಜ್ಞಾನ ವರದಿಯ ಆಧಾರದಲ್ಲಿ ತನಿಖೆ ಮತ್ತು ಪ್ರಕರಣದ ಮರುಸೃಷ್ಟಿಯ (ರಿಕ್ರಿಯೇಶನ್ ಆಫ್‌ ಸೀನ್ ಆಫ್‌ ಕ್ರೈಂ) ತನಿಖೆ ಆಗಬೇಕು. ಎಲ್ಲ ತನಿಖೆಗಳು ಮುಗಿದಾಗ ಪ್ರಕರಣದ ನಿಖರತೆ ಗೊತ್ತಾಗಲಿದೆ ಎಂದು ತಿಳಿಸಿದರು.
ಅವರ ತಂದೆ ತಾಯಿಗೆ ಭರಿಸಲಾರದ ದುಃಖ ಇದ್ದು, ಚಂದ್ರುವನ್ನು ರೇಣುಕಾಚಾರ್ಯ ಬಹಳ ಹಚ್ಚಿಕೊಂಡಿದ್ದರು. ಸಿವಿಲ್‌ ಎಂಜಿನಿಯರ್‌ ಆಗಿ ಇಲ್ಲೇ ಕೆಲಸ ಮಾಡುತ್ತಾ ಬಡವರ ಕಣ್ಣೀರು ಒರೆಸುತ್ತಾ, ಇಲ್ಲದವರಿಗೆ ಸಹಾಯ ಮಾಡುತ್ತಾ ಚಂದ್ರಶೇಖರ್‌ ಜನಪ್ರಿಯರಾಗಿದ್ದರು. ರೇಣುಕಾಚಾರ್ಯರ ಅರ್ಧ ಭಾರವನ್ನು ಚಂದ್ರಶೇಖರ್ ಹೊತ್ತಿದ್ದರು. ಅಂಥವರನ್ನು ಕಳೆದುಕೊಂಡಿರುವುದು ದುರ್ದೈವದ ಸಂಗತಿ ಎಂದು ವಿಷಾದಿಸಿದರು.
ಈ ಪ್ರಕರಣ ನಡೆದ ಬಳಿಕ ರಾಜ್ಯದಲ್ಲಿ ಹಲವು ಪ್ರಶ್ನೆಗಳು, ಊಹಾಪೋಹಗಳು ಎದ್ದಿವೆ. ಎಲ್ಲದಕ್ಕೂ ತನಿಖೆ ಬಳಿಕ ಉತ್ತರ ಸಿಗಲಿದೆ. ಚಂದ್ರಶೇಖರ್‌ನ ಮೃತದೇಹ ಕಾರಿನ ಹಿಂಬದಿ ಸೀಟ್‌ನಲ್ಲಿ ಇದ್ದಿದ್ದು, ಕಾರಿನ ಎದುರು ಭಾಗ ಅಪಘಾತದಲ್ಲಿ ನಜ್ಜುಗುಜ್ಜಾಗಿದೆ ಎಂದು ಅಂದುಕೊಂಡರೂ ಹಿಂಬದಿಯಲ್ಲಿ ಹೇಗೆ ಹಾನಿಯಾಯಿತು ಎಂಬ ಪ್ರಶ್ನೆಗಳಿಂದಾಗಿ ಕೊಲೆ ನಡೆದಿದೆಯೇ ಎಂಬ ಅನುಮಾನ ಒಂದು ಕಡೆ ಇದೆ. ಆ ಸ್ಥಳದಲ್ಲಿ ಕಾರು ಗುದ್ದಿರುವ ಸನ್ನಿವೇಶ ಮುಂತಾದವುಗಳನ್ನು ನೋಡಿದಾಗ ಇದು ಅಪಘಾತ ಎಂಬ ಅನುಮಾನ ಇನ್ನೊಂದು ಕಡೆ ಇದೆ. ಈಗಲೇ ಯಾವುದೇ ನಿರ್ಧಾರಕ್ಕೆ ಬರಲು ಆಗುವುದಿಲ್ಲ ಎಂದು ತಿಳಿಸಿದರು.
‘ನಾನು ಮುಖ್ಯಮಂತ್ರಿಯಾಗಿ ಬಂದಿಲ್ಲ. ರೇಣುಕಾಚಾರ್ಯನ ಸಹೋದರನಾಗಿ ಬಂದಿದ್ದೇನೆ. ಅವರ ಜತೆಗೆ ನಿರಂತರ ಸಂಪರ್ಕದಲ್ಲಿದ್ದೆ. ಆದರೂ ಮನಸ್ಸು ತಡೆಯಲಾರದೇ ಬಂದಿದ್ದೇನೆ’ ಎಂದರು.
ಈ ಸಂದರ್ಭದಲ್ಲಿ ಸಚಿವರಾದ ಬೈರತಿ ಬಸವರಾಜ, ಗೋವಿಂದ ಕಾರಜೋಳ, ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌, ಎಂ.ಪಿ. ರೇಣುಕಾಚಾರ್ಯ, ಅವರ ಸಹೋದರ ಎಂ.ಪಿ. ರಮೇಶ್‌ ಮತ್ತಿತರರು ಇದ್ದರು.