ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ ಶವ.. ರೈಲ್ವೆ ಹಳಿ ಮೇಲೆ ಮಗನ ಶವ ಪತ್ತೆ

Advertisement

ಮಂಡ್ಯ: ತಾಯಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಮನೆಯಲ್ಲಿಯೇ ಪತ್ತೆಯಾದ ಬೆನ್ನಲ್ಲೇ ಮಗನು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಮಂಡ್ಯದಲ್ಲಿ ನಡೆದಿದೆ.
ಸುಭಾಷ್ ನಗರದ ಕ್ರಿಶ್ಚಿಯನ್ ಕಾಲೋನಿಯ ನಿವೃತ್ತ ಶಿಕ್ಷಕಿ ವೀಣಾ ಜೋ ದಿನಿ ಮತ್ತು ಇವರ ಮಗ ನಿತಿನ್ ಸಾವನ್ನಪ್ಪಿದವರಾಗಿದ್ದು. ಇವರ ಸಾವಿನ ಸುತ್ತ ಹಲವು ಅನುಮಾನ ಸೃಷ್ಟಿಸಿದೆ.
ಕ್ರಿಶ್ಚಿಯನ್ ಕಾಲೋನಿ ಎರಡನೇ ಕ್ರಾಸ್‌ನ ಮನೆಯಲ್ಲಿ ಶಿಕ್ಷಕಿ ವೀಣಾ ಜೋದಿನಿರ ಮೃತದೇಹ ಹೊಸ ವರ್ಷದ ಮೊದಲ ದಿನವಾದ ಭಾನುವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇವರ ಮಗ ನಿತಿನ್ ಶವ ಮಂಡ್ಯ ನಗರದ ಹೊರವಲಯ ವಿ.ಸಿ ಫಾರಂ ಗೇಟ್‌ನ ಬಳಿ ರೈಲ್ವೆ ಹಳಿ ಮೇಲೆ ಪತ್ತೆಯಾಗಿದ್ದು, ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಭಿನವ ಭಾರತಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ವೀಣಾ ಮಗನ ಜೊತೆಯಲ್ಲಿ ನಿವೃತ್ತ ಜೀವನ ಮಾಡುತ್ತಿದ್ದರು.
ಹಣಕ್ಕಾಗಿ ತಾಯಿಯನ್ನು ಪೀಡಿಸುತ್ತಿದ್ದನು ಎನ್ನಲಾಗಿದ್ದು, ಕ್ರಿಸ್ಮಸ್ ಹಬ್ಬವನ್ನು ತಾಯಿ-ಮಗ ಆಚರಿಸಿದ್ದರು. ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಬೇಕಾಗಿತ್ತು. ಅಷ್ಟರಲ್ಲೆ ಹೊಸ ವರ್ಷದ ಮೊದಲ ದಿನ ತನ್ನ ಮನೆಯಲ್ಲಿ ನಿವೃತ್ತ ಶಿಕ್ಷಕಿ ವೀಣಾ ಜೋದಿನಿ ಮೃತದೇಹ ಮನೆಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ನಿವೃತ್ತ ಶಿಕ್ಷಕಿ ಎತ್ತರವಾಗಿದ್ದು, ಆದರೆ ಅಷ್ಟು ಎತ್ತರ ಇರದ ಕಿಟಕಿಗೆ ನೇಣು ಬಿಗಿದುಕೊಳ್ಳಲು ಸಾಧ್ಯವೇ ಎಂಬ ಅನುಮಾನ ಸೃಷ್ಟಿಯಾಗಿ ಮಗನೇ ತಾಯಿಯನ್ನು ಕೊಂದಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.
ಪಶ್ಚಿಮ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಮಿಮ್ಸ್‌ಗೆ ರವಾನಿಸಿದ್ದರು, ತಾಯಿಯ ಸಾವಿನ ಬಗ್ಗೆ ನಿತಿನ್‌ನನ್ನು ಪೊಲೀಸರು ವಿಚಾರಣೆ ಮಾಡಿದ್ದರು.
ತಾಯಿಯ ಶವ ಶವಗಾರದಲ್ಲಿ ಇರುವ ಸಮಯದಲ್ಲಿ ಮಗನ ಶವ ಕೂಡ ಸೋಮವಾರ ಬೆಳಗ್ಗೆ ವಿಸಿ ಫಾರಂ ಗೇಟ್ ಬಳಿಯ ರೈಲ್ವೆ ಹಳಿ ಮೇಲೆ ಪತ್ತೆಯಾಗಿದ್ದು, ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಾಯಿ ಕೊಲೆಗೈದ ಪ್ರಾಯಶ್ಚಿತ್ತಕ್ಕೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನಾ, ಅಥವಾ ತಾಯಿಯ ಸಾವಿನಿಂದ ಮನನೊಂದಿದ್ದನಾ, ಒಟ್ಟಾರೆ
ತಾಯಿಯ ಸಂಶಯಾಸ್ಪದ ಸಾವು, ಮಗನ ಆತ್ಮಹತ್ಯೆ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.