ಗೋಕರ್ಣದಲ್ಲಿ ಸಿದ್ದೇಶ್ವರ ಶ್ರೀ ಚಿತಾಭಸ್ಮ ವಿಸರ್ಜನೆ

Advertisement

ಕಾರವಾರ: ಭಕ್ತರ ಪಾಲಿನ ನಡೆದಾಡುವ ದೇವರು ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಚಿತಾಭಸ್ಮವನ್ನು ಗೋಕರ್ಣದ ಮುಖ್ಯ ಕಡಲತೀರದಲ್ಲಿ ವಿಸರ್ಜನೆ ಮಾಡಲಾಯಿತು.
ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀ ಅವರ ಚಿತಾಭಸ್ಮವನ್ನು ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿ ಸಂಗಮದಲ್ಲಿ ವಿಸರ್ಜನೆ ಮಾಡಿದ ಬಳಿಕ ಜ್ಞಾನ ಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ವಿಶೇಷ ವಾಹನದಲ್ಲಿ ಗೋಕರ್ಣಕ್ಕೆ ಚಿತಾಭಸ್ಮವನ್ನು ಸಹಸ್ರಾರು ಭಕ್ತರೊಂದಿಗೆ ತರಲಾಗಿತ್ತು.
ಬಳಿಕ ಗೋಕರ್ಣದ ಮುಖ್ಯ ಕಡಲತೀರದಲ್ಲಿ ಶ್ರೀಗಳ ಚಿತಾಭಸ್ಮವನ್ನಿಟ್ಟು ತೆಂಗಿನ ಗರಿ, ಸಾವಂತಿಗೆ ಹೂವು, ಶ್ರೀಗಳ ಭಾವಚಿತ್ರ, ಬಾಳೆ ಹಣ್ಣು, ತೆಂಗಿನ ಕಾಯಿ, ಊದು ಭತ್ತಿ ಹಚ್ಚಿ ಬಂದಂತಹ ಹಲವು ಸ್ವಾಮೀಜಿಗಳು ಹಾಗೂ ಭಕ್ತರು ಪೂಜೆ ಸಲ್ಲಿಸಿದರು. ಬಳಿಕ ಶ್ರೀಗಳು ಚಿತಾಭಸ್ಮದ ಮುಂದೆ ಕೈ ಮುಗಿದು ಭಜನೆ ನಡೆಸಿದರು. ಬಳಿಕ ಸಂಜೆ ಐದು ಗಂಟೆ ವೇಳೆಗೆ ಬೋಟ್ ಮೂಲಕ ಶ್ರೀಗಳ ಚಿತಾಭಸ್ಮವನ್ನು ಗೋಕರ್ಣದ ಮುಖ್ಯ ಕಡಲತೀರದಲ್ಲಿ ಕೊಂಡೊಯ್ದು ವಿಸರ್ಜನೆ ಮಾಡಲಾಯಿತು.