ಹುಬ್ಬಳ್ಳಿ: ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಅನುಷ್ಠಾನ ವಿಚಾರದಲ್ಲಿ ಗೋವಾ ಸರ್ಕಾರದ ನಡೆ ನನಗೆ ಗೊತ್ತಿಲ್ಲ. ನಾವು ಕಾನೂನು ಹೋರಾಟ ಮಾಡಿದ ಬಳಿಕವೇ ನಮಗೆ ಡಿಪಿಆರ್ ದೊರೆತಿದೆ. ಶಿಸ್ತುಬದ್ಧವಾಗಿ ಕಾನೂನು ಪ್ರಕಾರ ಯೋಜನೆ ಅನುಷ್ಠಾನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ಅನುಷ್ಠಾನ ವಿಚಾರವಾಗಿ ಈಗಾಗಲೇ ಕಾನೂನು ಹೋರಾಟವಾಗಿ ಸುಪ್ರೀಂಕೋರ್ಟ್ ಆದೇಶ ಮೇಲೆ ನ್ಯಾಯಾಧೀಕರಣ ರಚನೆಯಾಗಿ ಅದು ೧೦ ವರ್ಷಗಳ ಕಾಲ ಈ ಕುರಿತು ಹೈಡ್ರಾಲಜಿಯಿಂದ ಹಿಡಿದು ಎಲ್ಲ ಆಯಾಮಗಳ ಮೇಲೆ ಪರಿಶೀಲನೆ ಮಾಡಿದ ಬಳಿಕ ತೀರ್ಪು ಕೊಡಲಾಗಿದೆ. ನ್ಯಾಯಾಧೀಕರಣ ತೀರ್ಪು ಎಂದರೆ ಸುಪ್ರೀಂ ಕೋರ್ಟ್ ತೀರ್ಪಿಗೆ ಸರಿಸಮನಾದುದು. ಅದರ ತೀರ್ಪಿನ ಆಧಾರದ ಮೇಲೆ ಕೇಂದ್ರ ಸರ್ಕಾರ ೨೦೧೭ರಲ್ಲಿಯೇ ನೋಟಿಫಿಕೇಶನ್ ಮಾಡಿತ್ತು. ಈಗ ಡಿಪಿಆರ್ಗೆ ಒಪ್ಪಿಗೆ ನೀಡಿದೆ. ಶಿಸ್ತುಬದ್ಧವಾಗಿ ಹಂತ ಹಂತವಾಗಿ ಕಾನೂನು ಪ್ರಕಾರವಾಗಿಯೇ ಮಾಡಿದ್ದೇವೆ. ಕಾನೂನು ಹೋರಾಟವಾಗಿಯೇ ಇದಾಗಿರುವುದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.